ಕಿರಿ ಗೋಣಿಮರ

ಸಾಲ್ವಡೊರೇಸೀ ಕುಟುಂಬಕ್ಕೆ ಸೇರಿದ ಸ್ಯಾಲ್ವಡೋರ ಪರ್ಸಿಕ ಮತ್ತು ಸಾಲ್ವಡೋರ ಓಲಿಯಾಯ್ಡಿಸ್ ಎಂಬೆರಡು ಮರಗಳಿರುವ ಸಾಮಾನ್ಯ ಹೆಸರು. ಇವೆರಡು ಮರಗಳೂ ಭಾರತ, ಸಿಂಹಳ, ಈಜಿಪ್ಟ್, ಇಥಿಯೋಪಿಯ ಮುಂತಾದ ದೇಶಗಳಲ್ಲಿ ಸಾಮಾನ್ಯವಾಗಿ ಕಾಣಬರುತ್ತವೆ. ಭಾರತದಲ್ಲಿ ಗುಜರಾತ್. ರಾಜಸ್ಥಾನ, ಮಧ್ಯಪ್ರದೇಶ ಮತ್ತು ಪಂಜಾಬ್ ಗಳಲ್ಲಿ ಹೇರಳವಾಗಿ ಬೆಳೆಯುತ್ತವೆ. ಎರಡೂ ಸುಮಾರು 15'-30' ಎತ್ತರಕ್ಕೆ ಬೆಳೆಯುವ ಮರಗಳು. ಬೆಳೆಯುವ ಪ್ರದೇಶವನ್ನು ಅವಲಂಬಿಸಿ ಮರದ ಎತ್ತರ ವ್ಯತ್ಯಾಸವಾಗುತ್ತದೆ. ಕಡಲತೀರ ಪ್ರದೇಶಗಳಲ್ಲಿ ಕೇವಲ 6' ಎತ್ತರವಿರಬಹುದು. ಮರದ ರೆಂಬೆಗಳು ಕೆಳಕ್ಕೆ ಬಗ್ಗಿರುವುದರಿಂದ ದೂರಕ್ಕೆ ಪೊದೆಸಸ್ಯದಂತೆ ಕಾಣುತ್ತವೆ.

ಕಿರಿ ಗೋಣಿಮರದ ಎಲೆಗಳು ಸರಳ, ಅಭಿಮುಖವಾಗಿ ಜೋಡಣೆಯಾಗಿವೆ. ಇವಕ್ಕೆ ಮಲ್ಲಿಗೆಯಂಥ ಸುವಾಸನೆ ಇದೆ. ಕಿರಿ ಗೋಣಿಮರದ ಸುತ್ತ ಈ ವಾಸನೆ ಹರಡಿರುತ್ತದೆ. ಸಾಮಾನ್ಯವಾಗಿ ಎಲೆಗಳು ದಪ್ಪ; ಸುಲಭವಾಗಿ ಮುರಿದು ಹೋಗುತ್ತವೆ. ಹೂಗಳು ಚಿಕ್ಕವು; ಅಂತ್ಯಾರಂಭಿ ಮಾದರಿಯ ಗೊಂಚಲುಗಳಲ್ಲಿ ಜೋಡಣೆಯಾಗಿವೆ; ಇವುಗಳ ಬಣ್ಣ ಬಿಳಿ ಅಥವಾ ಹಸಿರು ಮಿಶ್ರಿತ ಹಳದಿ. ಫಲ ಅಷ್ಟಿಫಲ ಮಾದರಿಯದು. ಕಾಯಿಯ ಬಣ್ಣ ಬಿಳಿ, ಕೆಂಪು, ಹಳದಿ, ಊದಾ, ಬೂದು ಇತ್ತಾದಿ. ಸ್ಯಾಲ್ವಡೋರ ಓಲಿಯಾಯ್ಡಿಸ್ ಪ್ರಭೇದದ ಹಣ್ಣು ಸಿಹಿಯಾಗಿಯೂ ಸ್ಯಾ. ಪರ್ಸಿಕದ ಹಣ್ಣು ಉಪ್ಪು ಮಿಶ್ರಿತ ಕಹಿರುಚಿಯುಳ್ಳದ್ದೂ ಆಗಿದೆ. ಹಣ್ಣಿನ ಸಿಪ್ಪೆಯಲ್ಲಿ ಎರಡು ಪದರಗಳಿವೆ. ಹೊರಪದರ ತೆಳು ಹಾಗೂ ಮೃದುವಾಗಿಯೂ ಒಳಪದರ ಗಟ್ಟಿಯಾಗಿಯೂ ಇವೆ. ಬೀಜ ಹಳದಿ ಬಣ್ಣದ್ದು; ಇದಕ್ಕೆ ಮಧುರವಾದ ವಾಸನೆಯಿದೆ. ಬೀಜದಲ್ಲಿ ಒಂದು ಬಗೆಯ ಎಣ್ಣೆಯಿದೆ. ಬೀಜದಲ್ಲಿನ ಎಣ್ಣೆಯ ಪ್ರಮಾಣ 35%-40%. ಇದರ ಬಣ್ಣ ಬೂದುಮಿಶ್ರಿತ ಹಸಿರು. ಇದನ್ನು ಕೊಬ್ಬರಿಎಣ್ಣೆಯ ಬದಲಾಗಿ ಸಾಬೂನು ತಯಾರಿಕೆಯಲ್ಲಿ ಬಳಸುವುದುಂಟು. ಇದು ಭಾರತದ ಕೆಲವೆಡೆ ಬಳಕೆಯಾಗುವ ಮುಖ್ಯ ಬಗೆಯ ಎಣ್ಣೆಗಳಲ್ಲೊಂದು. ಈ ಉಪಯೋಗದಿಂದಾಗಿ ಕಿರಿ ಗೋಣಿಮರದ ಬೀಜಗಳನ್ನು ಸಂಗ್ರಹಿಸಿ ಅವುಗಳಿಂದ ಎಣ್ಣೆಯನ್ನು ತೆಗೆಯುವ ಸಣ್ಣಪ್ರಮಾಣದ ಕೈಗಾರಿಕೆಗಳು ಸ್ಥಾಪನೆಯಾಗಿವೆ. ಮರದ ರೆಂಬೆ ಮತ್ತು ಕಾಯಿಗೊಂಚಲುಗಳನ್ನು ಕತ್ತರಿಸಿ ಲೊಥಾಣಿ ಎಂಬ ಯಂತ್ರದ (ಹತ್ತಿ ಬೀಜವನ್ನು ಹತ್ತಿಯಿಂದ ಬೇರ್ಪಡಿಸುವ ಯಂತ್ರ) ಸಹಾಯದಿಂದ ರೆಂಬೆ ಮತ್ತು ಗೊಂಚಲುಗಳಿಂದ ಹಣ್ನನ್ನು ಬೇರ್ಪಡಿಸಿ ಅನಂತರ ಬೀಜ ಒಡೆಯುವ ಯಂತ್ರಗಳಿಗೆ ಸಾಗಿಸಿ ಬೀಜಗಳನ್ನು ಒಡೆದು ಬೇಳೆ ತಯಾರಿಸುತ್ತಾರೆ. ಬೇಳೆಗಳನ್ನು ಎಕ್ಸ್‍ಪೆಲರ್ ಮತ್ತು ಗಾಣಗಳಿಗೆ ಹಾಕಿ ಎಣ್ಣೆಯನ್ನು ತೆಗೆಯುತ್ತಾರೆ. ಗುಜರಾತ್, ರಾಜಸ್ತಾನ, ಮಧ್ಯಪ್ರದೇಶ ಹಾಗೂ ಉತ್ತರ ಪ್ರದೇಶಗಳಲ್ಲಿ ಈ ಉದ್ಯಮ ಹೆಚ್ಚು.

ಕಿರಿ ಗೋಣಿಮರಕ್ಕೆ ಹಲವಾರು ಔಷಧಿಯ ಗುಣಗಳೂ ಇವೆ. ತೊಗಟೆಯಿಂದ ತಯಾರಿಸಿದ ಕಷಾಯವನ್ನು ಸಣ್ಣಜ್ವರದ ನಿವಾರಣಗೆ ಬಳಸುತ್ತಾರೆ. ಎಲೆಗಳನ್ನು ಸಂಧಿವಾತ, ಆಸ್ತಮ, ಕೆಮ್ಮು, ಗಂತಿ ಮುಂತಾದುವುಗಳಲ್ಲಿ ಉಪಯೋಗಿಸುವುದುಂಟು. ಎಲೆ ಹಾಗೂ ಕಾಯಿಗಳಿಗೆ ಪಚನಶಕ್ತಿಯನ್ನು ಹೆಚ್ಚಿಸುವ ಗುಣ ಇದೆ. ಅಲ್ಲದೆ ಇವು ಲಘುವಿರೇಚಕಗಳೂ ಹೌದು.  ಹಣ್ಣಿಗೆ ಕಾಮೋತ್ತೇಜಕ ಗುಣ ಇದೆಯೆಂದು ಹೇಳಲಾಗಿದೆ. ಸಿಹಿಯಾಗಿರುವ ಹಣ್ಣನ್ನು ದನಕರುಗಳು, ಒಂಟೆಗಳು ಹಾಗೂ ಮನುಷ್ಯರು ತಿನ್ನುತ್ತಾರೆ. ಕೆಳದರ್ಜೆಯ ಬೀಜಗಳನ್ನು ದನಗಳಿಗೆ ಮೇವಾಗಿ ಉಪಯೋಗಿಸುವುದುಂಟು. ಇದರಿಂದ ಹಾಲಿನ ಕೊಬ್ಬಿನ ಅಂಶ ಹೆಚ್ಚುತ್ತದೆಂದು ಹೇಳಲಾಗಿದೆ. ಹೊಗೆಸೊಪ್ಪಿನ ಬೆಳೆಗೆ ಕಿರಿ ಗೋಣಿಮರದ ಸೊಪ್ಪನ್ನು ಗೊಬ್ಬರವಾಗಿ ಉಪಯೋಗಿಸುವ ಕ್ರಮ ಕೆಲವೆಡೆ ಇದೆ.

(ಎಚ್.ಜಿ.ಎಂ.)

 

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ